ಸುಂದರವಾದ ಸಮುದ್ರತೀರಗಳು, ವರ್ಷದ ಸದಾ ಕಾಲ ಹಸಿರ ಸೀರೆ ಉಟ್ಟುಕೊಂಡು ಕಂಗೊಳಿಸುವ ಪಶ್ಚಿಮದ ನಿತ್ಯಹರಿದ್ವರ್ಣ ಕಾಡುಗಳು, ಅಲ್ಲಿನ ಗಿರಿ ಶ್ರೇಣಿಗಳು, ರುದ್ರ ರಮಣೀಯವಾಗಿ ಭೋರ್ಗರೆದು ಧುಮ್ಮಿಕ್ಕುವ ಸುಂದರ ಜಲಪಾತಗಳು, ಜೈವಿಕ ವಿವಿಧತೆಯಲ್ಲಿ ಅಮೆಜಾನ್ ಕಾಡುಗಳಿಗೆ ಪೈಪೋಟಿ ನೀಡಬಲ್ಲ ಕಾನನಗಳು, ಪಶ್ಚಿಮದಿಂದ ಸದಾ ಮುತ್ತಿಕ್ಕುವ ಅರಬ್ಬೀ ಸಮುದ್ರ ಇವೆಲ್ಲವೂ ಸೇರಿ ಕರ್ನಾಟಕವನ್ನ ಭಾರತದ ಒಂದು ವಿಸ್ಮಯಕಾರಿ ರಾಜ್ಯವನ್ನಾಗಿ ರೂಪಿಸಿವೆ ಅಂದರೆ ಅದು ಅತಿಶಯೋಕ್ತಿ ಆಗಲಾರದು. ಆದ್ದರಿಂದಲೇ ಕರ್ನಾಟಕ ವಿಸ್ಮಯಗಳ ಒಂದು ಆಗರ. ನಮ್ಮ ಕನ್ನಡ ನಾಡಿನ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಚಾಚಿರುವ ಕರಾವಳಿಯ ಸೌಂದರ್ಯ ಕನ್ನಡ ನಾಡಿನ ಸೌಂದರ್ಯವನ್ನ ಇಮ್ಮಡಿಗೊಳಿಸಿದೆ. ತಣ್ಣೀರ್ ಬಾವಿ, ಉಳ್ಳಾಲ, ಸುರತ್ಕಲ್ ನಂತಹ ಸಮುದ್ರ ತೀರಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಮಲ್ಪೆ, ಕಾಪು, ಮರವಂತೆ, ಸೆಂಟ್ ಮೇರಿಸ್ ದ್ವೀಪಗಳು ಉಡುಪಿ ಜಿಲ್ಲೆಯಲ್ಲಿ, ಓಂ ಬೀಚ್, ಮುರುಡೇಶ್ವರ, ಬೇಲೆಕೇರಿ, ಪ್ಯಾರಡೈಸ್ ಬೀಚ್, ಹನಿ ಬೀಚ್, ಕಾರವಾರದ ರವೀಂದ್ರ ನಾಥ ಠಾಗೋರ್ ಬೀಚ್ ಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಪ್ರವಾಸಿಗರನ್ನ ತಮ್ಮತ್ತ ಕೈ ಬೀಸಿ ಕರೆಯುತ್ತವೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ತೀರಗಳು ದೇಶ-ವಿದೇಶಗಳಲ್ಲಿ ಹೆಸರಾಗಿದ್ದು ಅಲ್ಲಿಗೆ ಭೇಟಿ ಕೊಡುವ ಮಂದಿಯಲ್ಲಿ ವಿದೇಶಿಯರದ್ದೇ ಮೇಲುಗೈ ಆಗಿರುತ್ತದೆ. ಇನ್ನು ಸಮುದ್ರಕ್ಕೂ-ಒಳ ನಾಡಿಗೂ ತಡೆಗೋಡೆಯ ರೀತಿ ಸುಭದ್ರವಾಗಿ ನಿಂತಿರುವ ನಮ್ಮ ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ಕೇರಳದಿಂದ ಹಿಡಿದು ಉತ್ತರದಲ್ಲಿ ಗುಜರಾತ್ ನ ವರೆಗೂ ಹಬ್ಬಿವೆ. ತನ್ನ ಒಡಲಲ್ಲಿ ವಿಶೇಷ ಜೀವ ಸಂಕುಲಗಳನ್ನು ಇಟ್ಟುಕೊಂಡು ಪೊರೆಯುತ್ತಿರುವ ಈ ಪಶ್ಚಿಮ ಘಟ್ಟ ಅದೇ ಕಾರಣಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಪಂಚದಲ್ಲಿರುವ ಎಂಟು ಅತಿ ಸೂಕ್ಷ್ಮ ಜೈವಿಕ ವಲಯಗಳ ಪೈಕಿ ನಮ್ಮ ಪಶ್ಚಿಮ ಘಟ್ಟವೂ ಒಂದು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಆಗಿದೆ. ಭಾರತದ ಭೌಗೋಳಿಕ ವಿಶೇಷಣಗಳಲ್ಲಿ ಅಚ್ಚರಿಗಳಾಗಿ ಕಾಣಿಸಿಕೊಳ್ಳುವ ಹಿಮಾಲಯ ಹಾಗು ಪಶ್ಚಿಮ ಘಟ್ಟಗಳ ಪೈಕಿ ಪಶ್ಚಿಮ ಘಟ್ಟವೇ ಅತ್ಯಂತ ಹಳೆಯದು ಎನ್ನುವುದು ಭೂಗೋಳ ತಜ್ಞರ ಅಭಿಮತ. ನಮ್ಮ ಪಶ್ಚಿಮ ಘಟ್ಟಗಳ ರಚನೆ ಇಂದಿಗೆ ಹದಿನೈದು ಕೋಟಿ ವರ್ಷಗಳ ಹಿಂದೆ ಆಗಿದೆ ಎಂದು ವಿಜ್ಞಾನಿಗಳು, ಭೂಗರ್ಭ ಅಧ್ಯಯನಕಾರರು ತಮ್ಮ ವಾದ ಮುಂದಿಡುತ್ತಾರೆ. ಅಪಾರ ಜೀವ ವೈವಿಧ್ಯತೆಗೆ ನೆಲೆಯಾಗಿರುವ ನಮ್ಮ ಪಶ್ಚಿಮ ಘಟ್ಟಗಳು ಜೈವಿಕ ವಲಯದಲ್ಲಿ ಅಮೆಜಾನ್ ಕಾಡುಗಳಷ್ಟೇ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಕರ್ನಾಟಕ ಮಾತ್ರವಲ್ಲದೆ ಇನ್ನಿತರ ರಾಜ್ಯಗಳಲ್ಲೂ ಹಾದು ಹೋಗುವ ಈ ಪಶ್ಚಿಮ ಘಟ್ಟಗಳು ಕರ್ನಾಟಕದಲ್ಲಿ ವೈಶಿಷ್ಟತೆಯೊಂದನ್ನ ಪ್ರದರ್ಶಿಸುತ್ತವೆ, ಅದೇನೆಂದರೆ ಪಶ್ಚಿಮ ಘಟ್ಟ ಸಾಲಿನಲ್ಲಿಯೇ ಅತೀ ಹೆಚ್ಚು ಮಳೆ ಸುರಿಸುವುದು ನಮ್ಮ ಕರ್ನಾಟಕದ ಆಗುಂಬೆಯ ಭಾಗದಲ್ಲಿ. ಆದ್ದರಿಂದ ಆಗುಂಬೆ ಭಾರತದಲ್ಲೇ ಅತೀ ಹೆಚ್ಚಿನ ಮಳೆ ಪಡೆಯುವ ಸ್ಥಳಗಳ ಪೈಕಿ ಒಂದಾಗಿದೆ. ಇನ್ನು ಕರ್ನಾಟಕದ ಪ್ರಾಣಿ ಸಂಕುಲಗಳ ಬಗ್ಗೆ ತಿಳಿಯ ಹೊರಟವರಿಗೆ ಅಪಾರ ಪ್ರಾಣಿ-ಪಕ್ಷಿ ಪ್ರಭೇದಗಳು ಇಲ್ಲಿ ಕಂಡು ಬರುತ್ತವೆ. ಹುಲಿ, ಆನೆ, ಕರಡಿ, ಚಿರತೆ, ಕಾಡುಹಂದಿ, ಕಾಡೆಮ್ಮೆ, ಲಂಗೂರ್, ಕಾಳಿಂಗ ಸರ್ಪ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಈ ವಿಚಾರಗಳಲ್ಲಿ ಕನ್ನಡಿಗರಿಗೆ ನಿಜವಾಗಿಯೂ ಹೆಮ್ಮೆ ಉಂಟು ಮಾಡುವುದು ಕರ್ನಾಟಕದ ಸೀಮೆಯಲ್ಲಿ ಕಂಡು ಬರುವ ಹುಲಿ ಮತ್ತು ಆನೆಗಳ ಸಂಖ್ಯೆಯೇ. ನಮ್ಮ ಕರ್ನಾಟಕ ಇಡೀ ಪ್ರಪಂಚದಲ್ಲಿಯೇ ಹೆಚ್ಚು ಹುಲಿಗಳನ್ನು ಹಾಗು ಏಷಿಯಾಟಿಕ್ ಆನೆಗಳನ್ನು ಹೊಂದಿರುವ ಸ್ಥಳಗಳ ಪೈಕಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಸ್ಥಳವಾಗಿದೆ. ವರದಿಗಳ ಪ್ರಕಾರ ವಿಶ್ವದಾದ್ಯಂತ ನಾಲ್ಕು ಸಾವಿರ ಹುಲಿಗಳಿದ್ದು ಆ ಪೈಕಿ ಮೂರು ಸಾವಿರ ಹುಲಿಗಳು ನಮ್ಮ ಭಾರತದಲ್ಲೇ ಇವೆ. ಭಾರತದ ಆ ಮೂರು ಸಾವಿರ ಹುಲಿಗಳ ಪೈಕಿ ೨೦೨೦ ಜನವರಿ ತಿಂಗಳಿಗೆ ಸಂಬಂಧ ಪಟ್ಟಂತೆ ನಮ್ಮ ಕರ್ನಾಟಕದಲ್ಲೇ ೫೨೪ ಹುಲಿಗಳಿವೆ. ಅದರ ಅರ್ಥ ವಿಶ್ವದ ಶೇ.೧೩ ರಷ್ಟು ಹುಲಿಗಳು ನಮ್ಮ ಕರ್ನಾಟಕದಲ್ಲೇ ಇವೆ. ಇನ್ನು ಆನೆಗಳ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ೨೦೨೦ರ ಜನವರಿಗೆ ಅಂತ್ಯಗೊಂಡಂತೆ ಕರ್ನಾಟಕದಲ್ಲಿರುವ ಏಷಿಯಾಟಿಕ್ ಆನೆಗಳ ಸಂಖ್ಯೆ ೬೦೪೯, ಅದು ಭಾರತದ ಶೇ.೨೨ರಷ್ಟಾದರೆ ಪ್ರಪಂಚದ ಶೇ.೧೨ ಏಷಿಯಾಟಿಕ್ ಆನೆಗಳ ಪ್ರಮಾಣ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟವಲ್ಲದೆ ತಮಿಳುನಾಡಿನ ಮಧುಮಲೈ ಹಾಗು ಕೇರಳದ ವಯನಾಡು ಪ್ರದೇಶಗಳು ಸೇರುವ ಜಾಗದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚಿನ ಹುಲಿಗಳು ಹಾಗು ಏಷಿಯಾಟಿಕ್ ಆನೆಗಳು ನೆಲೆಸಿವೆ. ಇವುಗಳೆಲ್ಲಾ ಜೈವಿಕ ವಲಯದ ಅಚ್ಚರಿಗಳಾದರೆ, ಭೌಗೋಳಿಕ ಅಚ್ಚರಿಗಳಲ್ಲಿ ಕರ್ನಾಟಕ ತನ್ನದೇ ಛಾಪು ಹೊಂದಿರುವುದು ಕಂಡು ಬರುತ್ತದೆ. ಪೂರ್ವ ಹಾಗು ಪಶ್ಚಿಮ ಘಟ್ಟಗಳೆರಡೂ ಕರ್ನಾಟಕದಲ್ಲಿ ಮೇಳೈಸಿದ್ದು ಕುದುರೆ ಮುಖ, ಕೊಡಚಾದ್ರಿ, ಬಾಬಾ ಬುಡನ್ ಗಿರಿ, ಕೆಮ್ಮಣ್ಣು ಗುಂಡಿ, ಕುಮಾರ ಪರ್ವತ, ಬ್ರಹ್ಮಗಿರಿ, ಪುಷ್ಪಗಿರಿ ಮುಂತಾದ ಪರ್ವತ ಶ್ರೇಣಿಗಳು ಪಶ್ಚಿಮದಲ್ಲಿ ಬಿಳಿಗಿರಿ ರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟಗಳು ಪೂರ್ವದಲ್ಲಿ ಘಟ್ಟ ಪ್ರದೇಶಗಳಾಗಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಬಯಲು ಸೀಮೆಯಾದ ಉತ್ತರ ಕರ್ನಾಟಕದಲ್ಲೂ ಕಪ್ಪತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುತ್ತದೆ. ಈ ಪರ್ವತಗಳ ವಿಚಾರದಲ್ಲಿ ಭಾರತದ ಪಾಲಿಗೆ ಭೌಗೋಳಿಕ ಅಚ್ಚರಿ ಎಂದೇ ಪರಿಗಣಿಸಲ್ಪಡುವ ಪೂರ್ವ ಹಾಗು ಪಶ್ಚಿಮ ಘಟ್ಟಗಳು ಕೂಡುವ ಸ್ಥಳ ಕೂಡ ನಮ್ಮ ಕರ್ನಾಟಕದಲ್ಲೇ ಇದೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಪೂರ್ವ ಹಾಗು ಪಶ್ಚಿಮಘಟ್ಟಗಳನ್ನು ಬೆಸೆಯುವ ಸ್ಥಳವಾಗಿ ಹೆಸರುವಾಸಿಯಾಗಿದೆ. ಕರ್ನಾಟಕದ ಜಲಪಾತಗಳ ಅಧ್ಯಾಯ ಭಾರತ ದೇಶದ ಪಾಲಿಗೆ ಇನ್ನೂ ರೋಚಕವಾಗಿದೆ. ನಮ್ಮ ಕರ್ನಾಟಕದಲ್ಲಿರುವ ಜೋಗ, ಮಾಗೋಡು, ಲೂಷಿಂಗ್ ಟನ್, ಗೋಕಾಕ್, ಉಂಚಳ್ಳಿ, ಚಕ್ಲಿಹೊಳೆ, ಇರುಪ್ಪು, ಅಬ್ಬೆ, ಗಗನಚುಕ್ಕಿ, ಭರಚುಕ್ಕಿ ಮುಂತಾದ ಜಲಪಾತಗಳು ಅಕ್ಷರಶಃ ಕನ್ನಡ ನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕುಂಚಿಕಲ್ ಜಲಪಾತ ೪೫೫ ಮೀಟರ್(೧೪೯೩ ಅಡಿ) ಎತ್ತರ ಜಲಪಾತವಾಗಿದ್ದು ಭಾರತದಲ್ಲಿ ಅತೀ ಎತ್ತರದ ಜಲಪಾತವಾಗಿದೆ. ಜೋಗದ ಜಲಪಾತ ಕರ್ನಾಟಕದ ಅತ್ಯಂತ ರಮಣೀಯವಾದ ಜಲಪಾತವಾಗಿದ್ದು ದೇಶದ ಅತೀ ಎತ್ತರದ ಜಲಪಾತಗಳಲ್ಲೊಂದಾಗಿದೆ. ನೈಸರ್ಗಿಕ ಸಂಪತ್ತು ಹಾಗು ಪ್ರವಾಸೋದ್ಯಮ ಎರಡನ್ನೂ ನಾವು ಗಮನದಲ್ಲಿ ಇರಿಸಿಕೊಂಡು ನೋಡಿದಾಗ ನಮಗೆ ಕಾಣ ಸಿಗುವುದು ಕರ್ನಾಟಕದ ನಿಜವಾದ ವೈಭವ. ಇಲ್ಲಿ ಪಶ್ಚಿಮ ಘಟ್ಟಗಳಿವೆ, ಪೂರ್ವ ಘಟ್ಟಗಳಿವೆ, ಸಮುದ್ರ ತೀರಗಳಿವೆ, ಜಲಪಾತಗಳಿವೆ, ಅಧ್ಯಯನ ಮಾಡಿದಷ್ಟೂ ಸಿಗುತ್ತಲೇ ಹೋಗುವ ಅಪಾರ ಜೀವ ಸಂಕುಲ ಇಲ್ಲಿದೆ, ರುದ್ರ ರಮಣೀಯ ಜಲಪಾತಗಳು ಇಲ್ಲಿವೆ – ಹೀಗೆ ಇವೆಲ್ಲವನ್ನೂ ಒಳಗೊಂಡ ಭಾರತದ ಏಕೈಕ ನಾಡು ಕರ್ನಾಟಕ ಎಂದರೂ ಅದು ತಪ್ಪಾಗಲಾರದು. ಪ್ರವಾಸಿಗರ ಪಾಲಿಗೆ ಕರ್ನಾಟಕ ನಿಜವಾಗಿಯೂ ಸ್ವರ್ಗವೇ ಸರಿ.
ಕರ್ನಾಟಕ ನೈಸರ್ಗಿಕ ಸಂಪತ್ತಿನ ಬಗ್ಗೆ ವಿಸ್ಮಯಕಾರಿ ಮಾಹಿತಿ
10
ಹಿಂದಿನ ಪೋಸ್ಟ್