ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪನೆಯಾದ ಕಥೆ

ಮಯೂರ, ಮಯೂರ ಶರ್ಮ, ಮಯೂರ ವರ್ಮ ಎಂದೆಲ್ಲಾ ವಿವಿಧ ಹೆಸರುಗಳಿಂದ ಪ್ರಖ್ಯಾತನಾಗಿರುವ ಕದಂಬ ಕುಲ ತಿಲಕ, ಕನ್ನಡಿಗರ ಅಸ್ಮಿತೆಯ ಕಾರಣ ಪುರುಷ, ಕನ್ನಡಿಗರ ಮನೆ ಮನಗಳಲ್ಲಿ ವಿಭಿನ್ನವಾದ ಛಾಪು ಮೂಡಿಸಿರುವ ಮಯೂರ ವರ್ಮನ ಕಥೆ ಭಾರತ ದೇಶದ ಇತಿಹಾಸದಲ್ಲೇ ಹೆಗ್ಗುರುತಾಗಿ ಉಳಿಯುವಂತಹುದು. ತನ್ನ ತೋಳ್ಬಲ, ಬುದ್ಧಿ ಬಲಗಳಿಂದ ಕನ್ನಡ ಭಾಷಿಕರಿಗಾಗಿಯೇ ಒಂದು ಸಾಮ್ರಾಜ್ಯ ಕಟ್ಟಿದ ಮಯೂರನ ಸಾಹಸಗಾಥೆಗಳನ್ನ ತಿಳಿದುಕೊಳ್ಳುವುದು ಇಂದಿನ ಕನ್ನಡಿಗರಿಗೆ ಅತ್ಯವಶ್ಯಕವಾಗಿದೆ. ಕದಂಬ ಕುಲ ಸ್ಥಾಪಕ ಮಯೂರ ಜನಿಸಿದ್ದು ಇಂದಿನ ನಮ್ಮ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಒಂದು ಬ್ರಾಹ್ಮಣ ಕುಟುಂಬದಲ್ಲಿ. ಆತನ ಮನೆಯ ಬಳಿಯೇ ಇದ್ದ ಪ್ರಣವೇಶ್ವರ ಗುಡಿಗೂ ಮಯೂರನಿಗೂ ವಿಶೇಷವಾದ ಬಂಧವೊಂದು ಬೆಳೆದುಕೊಂಡಿತ್ತು. ಆ ಪ್ರಣವೇಶ್ವರ ಗುಡಿಯ ಸಮೀಪದಲ್ಲೇ ಇದ್ದ ಕದಂಬ ವೃಕ್ಷದೊಡನೆಯೂ ಮಯೂರನ ಒಡನಾಟವಿತ್ತು. ಇದೇ ಕಾರಣಕ್ಕೆ ಆತನ ವಂಶಕ್ಕೆ ಕದಂಬ ವಂಶ ಎಂಬ ಹೆಸರು ಬಂದಿರಬಹುದೆಂದು ಅನೇಕ ವಿದ್ವಾಂಸರು ಊಹಿಸುತ್ತಾರೆ. ತಾಳಗುಂದದಲ್ಲಿ ನೆಲೆಸಿದ್ದ ವೀರ ಶರ್ಮನೆಂಬ ಒಬ್ಬ ಬ್ರಾಹ್ಮಣ ಗುರುವಿನ ಮಗ ಬಂಧುಸೇನ, ಬಂಧುಸೇನನು ಅನೇಕ ವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡು ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತನಾಗಿದ್ದವನು. ಆ ಬಂಧುಸೇನನ ಮಗನೇ ಮಯೂರ ವರ್ಮ. ಆಗಿನ ಶಿಕ್ಷಿತ ವರ್ಗದ ಕುಟುಂಬದಲ್ಲಿ ಮಯೂರ ಜನಿಸಿದ್ದನಾದ್ದರಿಂದ ಆತ ವಿದ್ಯಾಭ್ಯಾಸವನ್ನು ತನ್ನ ಮನೆಯಲ್ಲೇ ತನ್ನ ತಾತ ಹಾಗು ತಂದೆಯ ಮಾರ್ಗದರ್ಶನದಲ್ಲೇ ಆರಂಭ ಮಾಡುತ್ತಾನೆ. ಮುಂದೆ ಅವನ ವಿದ್ಯಾಭ್ಯಾಸ ನಿರ್ಣಾಯಕ ಹಂತ ತಲುಪಿದಾಗ ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈಗಿನ ತಮಿಳುನಾಡಿನ ಕಾಂಚಿಪುರಕ್ಕೆ ಹೊರಟು ನಿಲ್ಲುತ್ತಾನೆ. ಕಾಂಚಿಪುರ ಅಂದಿಗೆ ‘ದಕ್ಷಿಣದ ಕಾಶಿ’ ಎಂದೇ ಹೆಸರಾಗಿದ್ದ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರವಾಗಿದ್ದಷ್ಟೇ ಅಲ್ಲದೆ ಆಗ ತಮಿಳುನಾಡಿನ ಬಹುಪಾಲು ಭಾಗಗಳನ್ನು ಆಡಳಿತ ಮಾಡುತ್ತಿದ್ದ ಪಲ್ಲವರ ರಾಜಧಾನಿಯೂ ಆಗಿತ್ತು. ಅಲ್ಲಿ ದೇಶ-ವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬಂದು ನೆಲೆಸುತ್ತಿದ್ದರು. ಹೀಗೆ ಹೆಸರುವಾಸಿಯಾಗಿದ್ದ ಕಾಂಚಿಪುರ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿದ್ದರಿಂದ ಮಯೂರನ ತಾತ ವೀರಶರ್ಮನೂ ತನ್ನ ಕಡೆಗಾಲವನ್ನು ಧಾರ್ಮಿಕ ಕ್ಷೇತ್ರವೊಂದರಲ್ಲಿ ಕಳೆಯುವ ಇಚ್ಛೆಯಿಂದ ಮಯೂರನೊಂದಿಗೆ ಕಾಂಚಿಪುರಕ್ಕೆ ಹೊರಟು ನಿಲ್ಲುತ್ತಾನೆ. ಮಯೂರ ಕಾಂಚಿಪುರಕ್ಕೆ ಬಂದು ಅಲ್ಲಿನ ವೇದ ವಿದ್ಯಾ ಕೇಂದ್ರಗಳಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾನೆ. ಹೀಗಿರುವ ಒಂದು ದಿನ ಮಯೂರನ ಜೀವನದಲ್ಲಿ ಮರೆಯಲಾರದಂತಹ ಘಟನೆಯೊಂದು ಜರುಗಿಬಿಡುತ್ತದೆ. ಅಶ್ವಮೇಧ ಯಾಗ ಕೈಗೊಂಡಿದ್ದ ಪಲ್ಲವರ ಅರಸ ಶಿವಸ್ಕಂದ ವರ್ಮ ಯಜ್ಞ ಕುಂಡಕ್ಕೆ ಶಾಸ್ತ್ರೋಕ್ತವಾಗಿ ಕುದುರೆಯನ್ನು ಬಲಿ ಕೊಡುವ ಸನ್ನಿವೇಶ ಮಯೂರನಿಗೆ ಇರಿಸು ಮುರಿಸು ಉಂಟು ಮಾಡುತ್ತದೆ, ತಕ್ಷಣವೇ ಅದನ್ನು ವಿರೋಧಿಸಿದ ಮಯೂರ ಅರಮನೆಯ ಕುದುರೆ ಸವಾರನೊಬ್ಬನಿಂದ ಅವಮಾನಕ್ಕೊಳಗಾಗುತ್ತಾನೆ. ಆ ದೂರನ್ನು ಆತ ಪಲ್ಲವ ಅರಸ ಶಿವಸ್ಕಂದ ವರ್ಮನಲ್ಲಿಗೆ ಕೊಂಡೊಯ್ದರೂ ಕಾರಣಾಂತರಗಳಿಂದ ಅಲ್ಲಿ ನ್ಯಾಯ ದೊರೆಯುವುದಿಲ್ಲ. ಈ ಘಟನೆ ದಕ್ಷಿಣ ಭಾರತದ ಇತಿಹಾಸದಲ್ಲಿ ಬದಲಾವಣೆಯ ಗಾಳಿಯೊಂದು ಬೀಸಲು ಕಾರಣವಾಗಿಬಿಡುತ್ತದೆ. ವಿದ್ಯಾರ್ಜನೆಗಾಗಿ ಬಂದು ಅರಮನೆಯಲ್ಲಿ ಅವಮಾನಿತನಾಗಿ ನಿಂತ ಮಯೂರನ ಹೃದಯದಲ್ಲಿ ಸ್ವಂತ ಸಾಮ್ರಾಜ್ಯ ಕಟ್ಟುವ ಬಯಕೆ ಕುಡಿಯೊಡೆಯುತ್ತದೆ, ತಕ್ಷಣವೇ ಕಾಂಚಿಪುರವನ್ನು ತೊರೆಯುವ ಮಯೂರ ತನ್ನ ಊರಿನ ಕಡೆ ಪ್ರಯಾಣ ಬೆಳೆಸುತ್ತಾನೆ. ಸಮಯ ಸಿಕ್ಕರೆ ಪಲ್ಲವರ ಅರಸೊತ್ತಿಗೆಗೆ ತಕ್ಕ ಬುದ್ಧಿ ಕಲಿಸಬೇಕೆನ್ನುವ ಯೋಜನೆಯಲ್ಲಿ ತನ್ನೂರಿನ ಕಡೆ ಸಾಗುತ್ತಿದ್ದ ಮಯೂರನಿಗೆ ಪಲ್ಲವರ ಆಡಳಿತದಲ್ಲಿ ನೊಂದು, ಬೆಂದು, ಬೇಸತ್ತಿದ್ದ ಒಂದು ತಂಡ ಎದುರಾಗುತ್ತದೆ. ಈವತ್ತಿನ ಚಂದವಳ್ಳಿ ಪ್ರಾಂತ್ಯದಲ್ಲಿ ಮಯೂರ ಆ ತಂಡದವರನ್ನ ಭೇಟಿ ಮಾಡಿ, ತನಗಾದ ಎಲ್ಲ ಅವಮಾನವನ್ನೂ ವಿವರಿಸುತ್ತಾನೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಆ ತಂಡದವರು ಪಲ್ಲವರಿಂದ ನೊಂದವರೇ ಆಗಿದ್ದರಿಂದ ಮಯೂರನಿಗೆ ತಮ್ಮ ಬೆಂಬಲ ಸೂಚಿಸುತ್ತಾರೆ. ಇದರಿಂದ ಅನಿರೀಕ್ಷಿತ ಅವಕಾಶ ಮಯೂರನಿಗೆ ಒದಗಿದಂತಾಗಿ ಆ ತಂಡದ ಸಹಾಯದಿಂದ ಬಲಾಢ್ಯ ಸೈನ್ಯವೊಂದನ್ನು ಮಯೂರ ಕಟ್ಟಿಬಿಡುತ್ತಾನೆ. ಮಯೂರನಿಗೆ ಯಾವ ರಾಜ ಬೆಂಬಲ ಇಲ್ಲದ ಕಾರಣ ಕಡಿಮೆ ಖರ್ಚಿನಲ್ಲಿ ದೊಡ್ಡ ಪ್ರಮಾಣದ ಯುದ್ಧ ಮಾಡುವ ಜರೂರತ್ತು ಮಯೂರನಿಗೆ ಉಂಟಾಗುತ್ತದೆ. ಅದಕ್ಕೆ ಉಪಾಯವೊಂದನ್ನು ಹುಡುಕಿದ ಮಯೂರ ಗೆರಿಲ್ಲಾ ಯುದ್ಧ ತಂತ್ರವನ್ನ ತನ್ನ ಸೇನಾ ಯುದ್ಧಗಳಲ್ಲಿ ಅಳವಡಿಸಿಕೊಳ್ಳುತ್ತಾನೆ. ಇದು ಇಡೀ ಭಾರತದಲ್ಲಿ ಮೊದಲ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಅನುಸರಿಸಿದ ಯುದ್ಧ ಪಡೆ ಎನ್ನುವ ಖ್ಯಾತಿಗೆ ಭಾಜನವಾಗಿದೆ. ಈ ಗೆರಿಲ್ಲಾ ಮಾದರಿಯ ಯುದ್ಧ ತಂತ್ರ ಒಂದು ಚಾಣಾಕ್ಷ ಮಾದರಿಯ ಯುದ್ಧತಂತ್ರ. ಬೆಟ್ಟ ಗುಡ್ಡಗಳಲ್ಲೋ, ಕಾಡು ಮೇಡುಗಳಲ್ಲೋ ಆಯಕಟ್ಟಿನ ಸ್ಥಳಗಳಲ್ಲಿ ಅವಿತುಕೊಂಡು ಶತ್ರು ಪಾಳಯದ ಮೇಲೆ ಅವರಿಗೆ ಅರಿವೇ ಇಲ್ಲದಂತೆ ಹಠಾತ್ತನೆ ದಾಳಿ ಮಾಡಿ ಗರಿಷ್ಟ ಪ್ರಮಾಣದ ಹಾನಿ ಉಂಟು ಮಾಡುವ ಒಂದು ವಿಭಿನ್ನ ಯುದ್ಧ ತಂತ್ರ. ಸೈನಿಕರು ಮುಖಾ-ಮುಖಿಯಾಗಿ ನಿಲ್ಲದೆ ಎದುರು ಪಾಳೆಯದ ನಿದ್ದೆಗೆಡಿಸುವ ಈ ಕಲೆ ಸುಲಭಸಾಧ್ಯವಾದುದಲ್ಲ. ಕಡಿಮೆ ಖರ್ಚಿನಲ್ಲಿ ಗರಿಷ್ಟ ದಾಳಿ ಎಸಗಬಹುದಾದ ಈ ಸಮರ ಕಲೆಯನ್ನು ಅನುಸರಿಸಿಯೇ ಪುಟ್ಟ ರಾಷ್ಟ್ರ ವಿಯೆಟ್ನಾಂ ಒಮ್ಮೆ ಅಮೆರಿಕಾವನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು. ನಮ್ಮ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ಬ್ರಿಟೀಷರೊಂದಿಗೆ ಸೆಣಸಿದ್ದು, ಕೆಳದಿಯ ಚೆನ್ನಮ್ಮ ಮೊಘಲರ ದೊರೆ ಔರಂಗ ಜೇಬನಿಗೆ ಮಣ್ಣು ಮುಕ್ಕಿಸಿದ್ದು, ಇವೆಲ್ಲವೂ ಗೆರಿಲ್ಲಾ ಮಾದರಿಯ ಯುದ್ಧ ಯುದ್ಧ ತಂತ್ರಗಳಿಂದಲೇ ಸಾಧ್ಯವಾದವು ಎನ್ನುವ ವಿಚಾರವನ್ನು ನಾವು ಇಲ್ಲಿ ಗಮನಿಸಿದರೆ ಗೆರಿಲ್ಲಾ ಯುದ್ಧ ತಂತ್ರಕ್ಕಿರುವ ಶಕ್ತಿಯ ಅರಿವು ನಮಗಾಗದೆ ಇರದು. ಹೀಗೆ ಬಲಾಢ್ಯ ಗೆರಿಲ್ಲಾ ಪಡೆ ಕಟ್ಟಿಕೊಂಡ ಮಯೂರ ಮೊದಲು ಪಲ್ಲವರ ಸುಪರ್ದಿಯಲ್ಲಿದ್ದ ಶ್ರೀ ಶೈಲವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಭೀಕರ ಯುದ್ಧದಲ್ಲಿ ಪಲ್ಲವರ ಸೈನ್ಯವನ್ನ ಇಂಚು ಇಂಚಾಗಿ ಕಾಡಿದ ಮಯೂರನ ಸೈನ್ಯ ಪಲ್ಲವರ ಆಡಳಿತಕ್ಕೆ ಛಡಿಯೇಟು ಕೊಟ್ಟಿದ್ದು ಶ್ರೀಶೈಲದಲ್ಲಿ. ಶ್ರೀಶೈಲವನ್ನು ತನ್ನ ಕೈವಶ ಮಾಡಿಕೊಳ್ಳುವ ಮಯೂರ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡರೂ ಅಷ್ಟಕ್ಕೇ ನಿಲ್ಲದೆ ಮುಂದುವರೆದು ಅನೇಕ ಸ್ಥಳಗಳನ್ನ ಪಲ್ಲವರ ಸುಪರ್ದಿಯಿಂದ ಸ್ವಾತಂತ್ರ್ಯಗೊಳಿಸುತ್ತಾನೆ ಅರ್ಥಾತ್ ಕದಂಬ ಸಾಮ್ರಾಜ್ಯದ ಸೃಷ್ಟಿಗೆ ಕಾರಣನಾಗುತ್ತಾನೆ. ಹೀಗೆ ಒಬ್ಬ ಕನ್ನಡಿಗನ ಮೇಲಾದ ಅವಮಾನದ ಸೇಡಿನ ಜ್ವಾಲೆ ಒಂದು ಸಾಮ್ರಾಜ್ಯದ ಉಗಮಕ್ಕೆ ಕಾರಣವಾಗುತ್ತದೆ. ಆ ಮೂಲಕ ಭಾರತದ ಇತಿಹಾಸದಲ್ಲಿ ಅದು ಒಂದು ಪ್ರಮುಖ ಮೈಲಿಗಲ್ಲಾಗುತ್ತದೆ. ಅಂದು ಮಯೂರ ಕಟ್ಟಿದ ಆ ಸಾಮ್ರಾಜ್ಯ ಕ್ರಿ.ಶ ೩೪೫ ರಿಂದ ಕ್ರಿ.ಶ ೫೪೦ ರ ವರೆಗೆ ಸುಮಾರು ೨೦೦ ವರ್ಷಗಳ ಕಾಲ ಕರ್ನಾಟಕದಲ್ಲಿ ಭದ್ರವಾಗಿ ನಿಂತು ಆಡಳಿತ ನಡೆಸುತ್ತದೆ. ತನ್ನ ಆಳ್ವಿಕೆಯ ಕಾಲದಲ್ಲೂ ಸಾಮ್ರಾಜ್ಯ ವಿಸ್ತರಣೆಯ ಕಡೆ ಗಮನ ಹರಿಸಿದ್ದ ಮಯೂರ ದಕ್ಷಿಣದಲ್ಲಿ ತ್ರೈಕೂಟರು, ಪುನ್ನಾಟರು, ಬಾಣರು, ಅಭೀರರನ್ನು ಬಗ್ಗು ಬಡಿಯುವುದಲ್ಲದೆ ಉತ್ತರದಲ್ಲಿ ಪಾರಿಯಾತ್ರಿಕರು, ಮುಖಾರಿಗಳು, ಶಕಸ್ಥಾನರನ್ನು ಸೋಲಿಸುತ್ತಾನೆ. ಈ ಮಯೂರನ ರಣೋತ್ಸಾಹ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ಮಾರ್ಗವಾಗಿ ನರ್ಮದಾ ನದಿಯವರೆಗೂ ಸಾಗಿತ್ತು ಎಂದು ಇತಿಹಾಸಕಾರರು ಸ್ಪಷ್ಟಪಡಿಸುತ್ತಾರೆ. ಬನವಾಸಿಯನ್ನು ತನ್ನ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡು ಕ್ರಿ.ಶ ೩೪೫ ರಿಂದ ಕ್ರಿ.ಶ ೩೬೫ ವರೆಗೆ ೨೦ ವರ್ಷಗಳ ಕಾಲ ರಾಜ್ಯಭಾರ ಮಾಡಿದ ಮಯೂರ ನಂತರ ಕಾಲನಲ್ಲಿ ಲೀನವಾಗುತ್ತಾನೆ. ನಾವಿಂದು ಪ್ರಪಂಚದ ಅತಿ ಹಳೆಯ ನುಡಿಗಳಲ್ಲಿ ಒಂದಾದ ಕನ್ನಡವನ್ನು ಈಗಲೂ ಮಾತನಾಡುತ್ತಿದ್ದರೆ ಅದಕ್ಕೆ ಅಂದು ಕದಂಬರು ಕೊಟ್ಟ ಮನ್ನಣೆಯೇ ಕಾರಣ. ಸ್ವಂತದ್ದೊಂದು ಅಧಿಕಾರವಿಲ್ಲದೆ ಇದ್ದಿದ್ದರೆ ಕನ್ನಡದ ಸ್ಥಿತಿ ಏನಾಗುತ್ತಿತ್ತೋ ಊಹಿಸಕೊಳ್ಳುವುದು ಕಷ್ಟ!. ಕದಂಬರಿಗಿಂತಲೂ ಹಿಂದಿನ ರಾಜ ಮನೆತನಗಳಾದ ಬಾಣರು, ಪುನ್ನಾಟರು, ಚುಟುಗಳು, ಇನ್ನಿತರರು ಕನ್ನಡ ಸೀಮೆಯಲ್ಲಿ ಜನರ ಆಡುಭಾಷೆಯಾದ ಕನ್ನಡದ ಬದಲಿಗೆ ಪ್ರಾಕೃತವನ್ನು ಬಳಸಿರುವುದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆ ಸಂಧರ್ಭದಲ್ಲಿ ಅಲ್ಲಿನ ಬಹು ಸಂಖ್ಯಾತ ಕನ್ನಡ ಭಾಷಿಗರು ಕನ್ನಡ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನ ಹಂಬಲಿಸಿರಬಹುದು, ಆ ಒಂದು ಹಂಬಲವನ್ನ ನಿಜ ರೂಪದಲ್ಲಿ ತಂದು ಕನ್ನಡ ನುಡಿಯನ್ನು ಆಡಳಿತ ಭಾಷೆಯಾಗಿ ಮಾಡುವಲ್ಲಿ ಮಯೂರನ ಪಾತ್ರವನ್ನ ಕನ್ನಡಿಗರು ಯಾರೂ ಮರೆಯುವಂತಿಲ್ಲ. ಇವೆಲ್ಲವೂ ಯಾವುದೋ ಸಿನೆಮಾ ಕಥಾನಕವಲ್ಲ, ಬದಲಾಗಿ ಕನ್ನಡದ ನಾಡಿನ ಮೊದಲ ಸಾಮ್ರಾಜ್ಯ ಕದಂಬರ ಹಾಗು ಅದರ ಸ್ಥಾಪಕ ಮಯೂರ ವರ್ಮನ ಕೆಚ್ಚಿನ ಯಶೋಗಾಥೆಗಳು.

Related posts

ಕನ್ನಡ ಭಾಷೆಯ ಹಳೆತನದ ಬಗ್ಗೆ ನೀವರಿಯದ ಮಾಹಿತಿ

ಕರ್ನಾಟಕ ನೈಸರ್ಗಿಕ ಸಂಪತ್ತಿನ ಬಗ್ಗೆ ವಿಸ್ಮಯಕಾರಿ ಮಾಹಿತಿ

ಇದು ಕನ್ನಡ ನಾಡಿನ ಪ್ರಾಚೀನತೆ