ಕರ್ನಾಟಕದ ಇತಿಹಾಸವನ್ನು ಅಧ್ಯಯನ ಮಾಡುವವರಿಗೆ ಗೋಚರವಾಗುವ ಕನ್ನಡದ ಜಗದೇಕ ವೀರ ಇಮ್ಮಡಿ ಪುಲಿಕೇಶಿ. ಕೇವಲ ಕನ್ನಡಿಗರನ್ನು ಮಾತ್ರವಲ್ಲ, ಇಡೀ ದಕ್ಷಿಣ ಭಾರತವನ್ನು ಉತ್ತರದ ಹರ್ಷವರ್ಧನನ ದಾಳಿಯಿಂದ ಪಾರು ಮಾಡಿದವನು ಇಮ್ಮಡಿ ಪುಲಿಕೇಶಿ, ಆದ ಕಾರಣದಿಂದಲೇ ಆತನನ್ನು ದಕ್ಷಿಣಾಪಥೇಶ್ವರ ಎಂಬ ನಾಮ ವಿಶೇಷಣದಿಂದ ಕರೆಯಲಾಗುತ್ತದೆ. ಈ ರಣಕಲಿಯ ಸಾಹಸ, ಶೌರ್ಯಗಳ ಅರಿವಿದ್ದ ಇರಾನ್ ದೇಶದ ಆಗಿನ ಚಕ್ರವರ್ತಿ ಎರಡನೇ ಖುಸ್ರೋ ಕಷ್ಟಕಾಲದಲ್ಲಿ ಪುಲಿಕೇಶಿ ತನಗೆ ಒದಗಬಹುದೆಂಬ ಭಾವನೆಯಿಂದ ಅಪಾರ ಪ್ರಮಾಣದ ಬೆಲೆ ಬಾಳುವ ಉಡುಗೊರೆಗಳನ್ನ ತನ್ನ ಭಂಟರಲ್ಲಿ ಕೊಟ್ಟು ಕಳುಹಿಸಿದ್ದನಂತೆ. ಇಮ್ಮಡಿ ಪುಲಿಕೇಶಿಯ ಬಾಲ್ಯದ ಹೆಸರು ‘ಎರೆಯ’. ಈತನ ತಾತ ಒಂದನೇ ಪುಲಿಕೇಶಿ ಹಾಗು ತಂದೆ ಕೀರ್ತಿವರ್ಮನ ಕಾಲದಲ್ಲೇ ಬಹುದೊಡ್ಡದಾಗಿ ಬೆಳೆದು ನಿಂತಿತ್ತು ಚಾಲುಕ್ಯ ಸಾಮ್ರಾಜ್ಯ. ಆದರೆ ಇಮ್ಮಡಿ ಪುಲಿಕೇಶಿಯ ತಂದೆ ಕೀರ್ತಿವರ್ಮ ನಿಧನನಾದಾಗ ಈತ ಇನ್ನು ಅಪ್ರಾಪ್ತ ವಯಸ್ಸಿನ ಹುಡುಗನಾಗಿದ್ದ ಎನ್ನುವ ಒಂದೇ ಕಾರಣದಿಂದ ಕೀರ್ತಿವರ್ಮನ ತಮ್ಮ ಮಂಗಳೇಶ ಸಿಂಹಾಸನಕ್ಕೆ ಏರುತ್ತಾನೆ. ಕೀರ್ತಿವರ್ಮ ರಾಜ್ಯವಾಳುತ್ತಿದ್ದ ಕಾಲಕ್ಕೆ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದ್ದ ಮಂಗಳೇಶ ತನ್ನ ಅಣ್ಣನಿಂದ ಉತ್ತಮ ಆಡಳಿತ ಕರಗತ ಮಾಡಿಕೊಂಡಿದ್ದನಾದ ಕಾರಣ ಅಣ್ಣನ ಸಾವಿನ ನಂತರ ರಾಜ್ಯಭಾರ ಮಾಡುವುದಕ್ಕೆ ಮುಂದಾಗುತ್ತಾನೆ. ಬಾಲ್ಯಾವಸ್ಥೆಯಲ್ಲಿದ್ದ ಇಮ್ಮಡಿ ಪುಲಿಕೇಶಿ ತನ್ನ ಅಜ್ಜಿಯ ಆಶ್ರಯದಲ್ಲಿ ವಿದ್ಯಾಭ್ಯಾಸ ಆರಂಭ ಮಾಡುತ್ತಾನೆ. ಇತ್ತ ತನ್ನ ಅಣ್ಣನ ಅನುಪಸ್ಥಿತಿಯಲ್ಲಿ ಮಂಗಳೇಶ ರಾಜನಾಗಿ ಚಾಲುಕ್ಯ ಸಾಮ್ರಾಜ್ಯದ ವಿಸ್ತರಣೆಯ ಕಡೆಗೆ ಗಮನವನ್ನೂ ಕೊಡುತ್ತಾ, ಪ್ರಜಾಪರ ಕೆಲಸಗಳನ್ನು ಕೈಗೊಳ್ಳುತ್ತಾ ರಾಜ್ಯಭಾರ ಮಾಡುತ್ತಿರುತ್ತಾನೆ. ಈತ ಶ್ರೀರಾಮನ ಹಾಗೆ ಪರಾಕ್ರಮಿಯೂ, ಶಿಬಿಯ ಹಾಗೆ ಉದಾರವಾದಿಯೂ, ಯುಧಿಷ್ಠಿರನ ಹಾಗೆ ನಂಬಿಕಸ್ಥನೂ, ವಾಸುದೇವನ ಹಾಗೆ ಅದೃಷ್ಟವಂತನೂ, ಬೃಹಸ್ಪತಿಯ ಹಾಗೆ ಜ್ಞಾನಿಯೂ ಆಗಿದ್ದನೆಂದು ಮಹಾಕೂಟದ ಶಾಸನ ವರ್ಣನೆ ಮಾಡಿದೆ. ಈತ ಕಳಚೂರಿ ಬುದ್ಧರಾಜನನ್ನ ಸೋಲಿಸಿ ಇಂದಿನ ಛತ್ತೀಸ್ ಘಡದ ಬಹುಭಾಗಗಳನ್ನು ಚಾಲುಕ್ಯ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಅಪಾರ ಪ್ರಮಾಣದ ಆನೆಗಳನ್ನು, ಕುದುರೆಗಳನ್ನು, ಐಶ್ವರ್ಯವನ್ನು ಕಳಚೂರಿಗಳಿಂದ ಪಡೆದುಕೊಂಡು ಮಹಾಕೂಟದ ದೇವಸ್ಥಾನಕ್ಕೆ ಯಥೇಚ್ಛವಾಗಿ ದಾನವಾಗಿ ನೀಡುತ್ತಾನೆ. ತನ್ನ ವಿರುದ್ಧ ಬಂಡಾಯ ಎದ್ದಿದ್ದ ರೇವತಿ ದ್ವೀಪದ ಸ್ವಾಮಿರಾಜನನ್ನು ತನ್ನ ನೌಕಾಬಲವನ್ನ ಪ್ರಯೋಗಿಸಿ ಸೋಲಿಸುವ ಮೂಲಕ ಬಂಡಾಯ ಶಮನ ಮಾಡುತ್ತಾನೆ. ಹೀಗೆ ಮಂಗಳೇಶ ತನ್ನ ಸಾಮ್ರಾಜ್ಯದ ಆಂತರಿಕ, ಬಾಹ್ಯ ವಿಚಾರಗಳಲ್ಲಿ ಬಹಳ ಮಗ್ನನಾಗಿರಬೇಕಾದಾಗ, ಅತ್ತ ಇಮ್ಮಡಿ ಪುಲಿಕೇಶಿ ಬೆಳೆದು ದೊಡ್ಡವನಾಗಿ, ಸಕಲ ವಿದ್ಯೆಗಳಲ್ಲೂ ಪಾರಂಗತರಾಗಿ ರಾಜಧಾನಿಯ ಕಡೆಗೆ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನ ಜೊತೆಗೆ ಹೊರಟು ಬರುತ್ತಾನೆ. ಇದು ಮಂಗಳೇಶನಿಗೆ ಸಹಿಸದಾಗುತ್ತದೆ. ತನ್ನ ತಂದೆ ಬಿಟ್ಟುಹೋದ ಸಿಂಹಾಸನಕ್ಕೆ ನ್ಯಾಯಬದ್ಧವಾಗಿ ಉತ್ತರಾಧಿಕಾರಿ ಆಗಬೇಕಾದವನು ತಾನು ಎಂಬ ಭಾವನೆಯಿಂದ ಇಮ್ಮಡಿ ಪುಲಿಕೇಶಿ ಬಾದಾಮಿಗೆ ಮರಳಿದರೆ ಅಲ್ಲಿ ಮಂಗಳೇಶನ ಮನಸ್ಸಿನಲ್ಲಿದ್ದ ಯೋಚನೆಯೇ ಬೇರೆಯಾಗಿತ್ತು. ಆತ ಗುಟ್ಟಾಗಿ ತನ್ನ ಮಗನಿಗೆ ಪಟ್ಟ ಕಟ್ಟಲು ಉಪಾಯ ಹೂಡುತ್ತಿದ್ದ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ಉಂಟಾದ ಮಂಗಳೇಶ ಹಾಗು ಇಮ್ಮಡಿ ಪುಲಿಕೇಶಿಯ ನಡುವಿನ ಶೀತಲ ಸಮರ ಇಮ್ಮಡಿ ಪುಲಿಕೇಶಿಯನ್ನು ಚಾಲುಕ್ಯ ಸಾಮ್ರಾಜ್ಯದಿಂದ ಗಡಿಪಾರು ಮಾಡುವವರೆಗೂ ಮುನ್ನಡೆಯುತ್ತದೆ. ರಾಜ್ಯದಿಂದ ಗಡಿಪಾರಾದ ಪುಲಿಕೇಶಿ ತನ್ನ ತಂದೆ ಕೀರ್ತಿವರ್ಮನ ನಂಬಿಕಸ್ಥ ಸಾಮಂತರಾಗಿದ್ದ ಕೆಲವು ಅರಸರ ಸಹಾಯದಿಂದ ಕೋಲಾರದಲ್ಲಿ ಆಶ್ರಯ ಪಡೆದು ಅಲ್ಲೇ ಒಂದು ಸೈನ್ಯ ಸಂಘಟಿಸಿಕೊಂಡು ತನ್ನ ಚಿಕ್ಕಪ್ಪ ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಆಂಧ್ರ ಪ್ರದೇಶದ ಅನಂತಪುರದ ಶಾಸನ ವಿವರಿಸುವಂತೆ ‘ಎಳ್ ಪಟ್ಟು ಸಿಂಭಗೆ’ ಎನ್ನುವ ಸ್ಥಳದಲ್ಲಿ ಸತ್ಯಾಶ್ರಯ ಪುಲಿಕೇಶಿ ಹಾಗು ಮಂಗಳೇಶನ ನಡುವೆ ಭೀಕರ ಯುದ್ಧ ನಡೆದು ಅದರಲ್ಲಿ ಮಂಗಳೇಶ ಸಾವನ್ನಪ್ಪುತ್ತಾನೆ. ಮಂಗಳೇಶನ ಸಾವಿನ ನಂತರ ಕ್ರಿಶ ೬೧೦ರಲ್ಲಿ ಸಿಂಹಾಸನವನ್ನೇರಿದ ಇಮ್ಮಡಿ ಪುಲಿಕೇಶಿಯ ಆರಂಭಿಕ ದಿನಗಳು ಬಹಳ ತಾಪತ್ರಯದ ದಿನಗಳಾಗಿ ಪರಿಣಮಿಸುತ್ತವೆ. ಅದಕ್ಕೆ ಕಾರಣ ಮಂಗಳೇಶನ ನಂಬಿಕಸ್ಥರಾಗಿದ್ದ ಅಪ್ಪಾಯಿಕ ಮತ್ತು ಗೋವಿಂದ ಎನ್ನುವ ಇಬ್ಬರು ಸಾಮಂತರು ಇಮ್ಮಡಿ ಪುಲಿಕೇಶಿ ವಿರುದ್ಧ ಕತ್ತಿ ಮಸೆಯಲು ಆರಂಭ ಮಾಡಿಕೊಂಡಿದ್ದು. ಇದನ್ನು ಹತ್ತಿಕ್ಕಿ ಬಂಡಾಯ ಶಮನ ಮಾಡುವ ಪ್ರಯತ್ನವಾಗಿ ಪುಲಿಕೇಶಿ ಗೋವಿಂದನ ಜೊತೆ ಸಂಧಿ ಮಾಡಿಕೊಂಡು ಅಪ್ಪಾಯಿಕನ ಮೇಲೆ ಯುದ್ಧ ಮಾಡಿ ಆತನನ್ನ ಯುದ್ಧದಲ್ಲಿ ಸೋಲಿಸುತ್ತಾನೆ. ಹೀಗೆ ಒಂದೊಂದಾಗಿ ತನ್ನ ರಾಜ್ಯದೊಳಗಿದ್ದ ಬಂಡಾಯಗಳನ್ನ ಮೊದಲು ನಿರ್ಣಾಮ ಮಾಡಿದ ಪುಲಿಕೇಶಿ ಅನಂತರ ತನ್ನ ಸಾಮ್ರಾಜ್ಯ ವಿಸ್ತರಣೆಯ ಕಡೆಗೆ ಗಮನ ಹರಿಸುತ್ತಾನೆ. ತನ್ನ ಬಲಿಷ್ಠ ಸೈನ್ಯ ‘ಕರ್ಣಾಟ ಬಲ’ದ ನೇರ ನೇತೃತ್ವ ವಹಿಸಿಕೊಳ್ಳುವ ಆತ ದಕ್ಷಿಣದಲ್ಲಿ ಕದಂಬರನ್ನ ಸೋಲಿಸುವುದಷ್ಟೇ ಅಲ್ಲದೆ ಗಂಗರು ಹಾಗು ಆಳುಪರು ತನ್ನ ಅಧಿಪತ್ಯ ಒಪ್ಪಿಕೊಳ್ಳುವ ಹಾಗೆ ಮಾಡುತ್ತಾನೆ. ಇನ್ನೂ ಮುಂದುವರೆದ ಕರ್ಣಾಟಬಲ ಸೇನೆ ದಕ್ಷಿಣದ ಕಡೆಗೆ ಸಾಗಿ ಪಲ್ಲವ ಸಾಮ್ರಾಜ್ಯದತ್ತ ಮುಖ ಮಾಡುತ್ತದೆ. ಪಲ್ಲವರ ರಾಜಧಾನಿ ಕಾಂಚಿಪುರದಿಂದ ೨೫ಕಿಮೀ ದೂರದಲ್ಲಿರುವ ಪುಲ್ಲಲೂರ್ ಎಂಬ ಸ್ಥಳದಲ್ಲಿ ನಡೆದ ಘನ ಘೋರ ಯುದ್ಧದಲ್ಲಿ ‘ಕರ್ಣಾಟಬಲ’ಕ್ಕೆ ಸೋತ ಪಲ್ಲವರು ತಮ್ಮ ರಾಜಧಾನಿ ಕಾಂಚಿಪುರವನ್ನ ಉಳಿಸಿಕೊಂಡರೂ ತಮ್ಮ ರಾಜ್ಯದ ಉತ್ತರ ಭಾಗಗಳನ್ನ ಕಳೆದುಕೊಳ್ಳುತ್ತಾರೆ. ಹೀಗೆ ಗಂಗ, ಕದಂಬ, ಆಳುಪ, ಚೇರ, ಪಾಂಡ್ಯ, ಪಲ್ಲವ, ಚೋಳ ರು ತನ್ನ ಅಧಿಪತ್ಯವನ್ನ ಒಪ್ಪಿಕೊಳ್ಳುವಂತೆ ಮಾಡಿದ ಪುಲಿಕೇಶಿ ತದನಂತರ ಉತ್ತರ ಭಾಗದತ್ತ ತನ್ನ ವಿಜಯ ಯಾತ್ರೆಯನ್ನ ಕೈಗೊಳ್ಳುತ್ತಾನೆ. ಉತ್ತರಕ್ಕೆ ಸಾಗಿದ ಪುಲಿಕೇಶಿ ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯವನ್ನ ಆಳುತ್ತಿದ್ದ ಕೊಂಕಣದ ಮೌರ್ಯರನ್ನ ಸದೆ ಬಡಿದು ಘಾರಾಪುರಿ(ಇಂದಿನ ಎಲಿಫೆಂಟಾ ದ್ವೀಪ)ಯನ್ನು ತನ್ನ ನೌಕಾ ಬಲದ ಸಹಾಯದಿಂದ ವಶ ಪಡಿಸಿಕೊಳ್ಳುತ್ತಾನೆ. ಕಳಿಂಗರನ್ನ ಸೋಲಿಸಿ ಒಡಿಶಾವನ್ನ, ಕಳಚೂರಿಗಳನ್ನ ಸೋಲಿಸಿ ಛತ್ತೀಸ್ ಘಡದ ದಕ್ಷಿಣ ಕೋಸಲವನ್ನ, ವಿಷ್ಣುಕಂದಿನ ಇಂದ್ರವರ್ಮನನ್ನ ಸೋಲಿಸಿ ಆಂಧ್ರದ ವೆಂಗಿಯನ್ನ ಗೆದ್ದುಕೊಳ್ಳುತ್ತಾನೆ. ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನ ವೆಂಗಿಯ ಸಿಂಹಾಸನದಲ್ಲಿ ಕೂರಿಸಿದ ಪುಲಿಕೇಶಿ ಇಡೀ ದಕ್ಷಿಣ ಭಾರತದ ಮೇಲೆ ತನ್ನ ಅಧಿಪತ್ಯ ಸ್ಥಾಪಿಸುವ ಮೂಲಕ ಪ್ರಬಲ ಸಾಮ್ರಾಟನಾಗಿ ಹೊರ ಹೊಮ್ಮುತ್ತಾನೆ. ಇದೇ ಸಮಯಕ್ಕೆ ಅಂದ್ರೆ ಕ್ರಿಶ ೬೧೮ರ ಸುಮಾರಿಗೆ ಉತ್ತರ ಭಾರತದಲ್ಲಿ ಹರ್ಷವರ್ಧನ ಪ್ರವರ್ಧಮಾನಕ್ಕೆ ಬರುತ್ತಾನೆ. ಗುಪ್ತರ ಸಾಮ್ರಾಜ್ಯದ ಅಳಿವಿನಿಂದಾಗಿ ಒಡೆದುಹೋಗಿದ್ದ ಸಣ್ಣ ಪುಟ್ಟ ರಾಜ್ಯಗಳನ್ನ ಗೆದ್ದು ಇಡೀ ಉತ್ತರ ಭಾರತದ ಮೇಲೆ ಹಿಡಿತ ಸಾಧಿಸುವ ಅಭಿಲಾಷೆಯಿಂದ ಗುಜರಾತ್ ನ ಲಾಟಾ, ಮಧ್ಯಪ್ರದೇಶದ ಮಾಳವ ಪ್ರಾಂತ್ಯಗಳ ಮೇಲೆ ಎರಗುತ್ತಾನೆ. ಇದರಿಂದ ಭಯ ಭೀತರಾದ ಅಲ್ಲಿನ ಅರಸರು ಇಮ್ಮಡಿ ಪುಲಿಕೇಶಿಯ ಸಹಾಯ ಯಾಚಿಸಿ ಬರುತ್ತಾರೆ. ಶರಣಾಗತರ ರಕ್ಷಣೆಯೇ ಧರ್ಮವೆಂದು ನಂಬಿದ್ದ ಪುಲಿಕೇಶಿ ತನ್ನ ಅಪಾರ ಸೈನ್ಯವನ್ನ ನರ್ಮದಾ ನದಿ ತೀರಕ್ಕೆ ಕೂಡಲೇ ಅಟ್ಟುತ್ತಾನೆ. ಆ ಬೃಹತ್ ಸೈನ್ಯ ಸಾಗುತ್ತಿದ್ದರೆ ಭೂಮಿಯೇ ಕಂಪಿಸುತ್ತಿತ್ತು ಎಂದು ಆ ಸೈನ್ಯದ ಪ್ರಮಾಣವನ್ನು ವರ್ಣನೆ ಮಾಡಲಾಗಿದೆ. ಉತ್ತರ ಭಾರತವನ್ನೆಲ್ಲಾ ಗೆದ್ದು ಬೀಗುತ್ತಿದ್ದ ಶಿಲಾದಿತ್ಯ ಹರ್ಷವರ್ಧನನ ಸೈನ್ಯಕ್ಕೆ ಪುಲಿಕೇಶಿಯ ಕರ್ಣಾಟಬಲ ಸೈನ್ಯ ನರ್ಮದಾ ನದಿಯ ತಟದಲ್ಲಿ ಎದುರಾಗುತ್ತದೆ. ವೀರಾವೇಶದಿಂದ ಯುದ್ಧ ನಡೆದು ಅದರಲ್ಲಿ ಕರ್ಣಾಟಬಲದ ಕೈ ಮುಂದಾಗುತ್ತದೆ. ತನ್ನ ಅಶ್ವಪಡೆ, ಗಜಪಡೆ, ಕಾಲಾಳು ಪಡೆಗಳು ಹೀನಾಯವಾಗಿ ಸೋಲುತ್ತಿರುವುದನ್ನು ಅರಿತುಕೊಂಡ ಹರ್ಷವರ್ಧನ ತನ್ನ ಸೋಲು ಖಚಿತವೆಂದು ಮುಂದಾಲೋಚನೆ ಮಾಡಿ ಕೂಡಲೇ ಪುಲಿಕೇಶಿ ಜೊತೆಗೆ ಸಂಧಾನಕ್ಕೆ ನಿಲ್ಲುತ್ತಾನೆ. ಸೋತ ರಾಜನನ್ನ ಔದಾರ್ಯದಿಂದ ಬರ ಮಾಡಿಕೊಂಡ ಪುಲಿಕೇಶಿ ಅವನ ರಾಜ್ಯವನ್ನ ಕಬಳಿಸದೆ ಅವನಿಗೇ ಹಿಂದಿರುಗಿಸಿ ಇನ್ನೆಂದೂ ದಕ್ಷಿಣ ದಖ್ಖನ್ ಕಡೆ ತಲೆ ಹಾಕದಂತೆ ಆಜ್ಞೆ ಮಾಡುತ್ತಾನೆ. ಒಂದು ಪಕ್ಷ ಅಂದು ಪುಲಿಕೇಶಿ ಸೋತ ಹರ್ಷವರ್ಧನನ ರಾಜ್ಯವನ್ನ ವಶಪಡಿಸಿಕೊಂಡಿದ್ದರೇ ಆತ ಇಡೀ ಭಾರತದ ಸಾರ್ವಭೌಮನಾಗಿ ಮೆರೆದುಬಿಡಲು ಯಾವುದೇ ಅಡ್ಡಿ ಆತಂಕಗಳು ಇರಲಿಲ್ಲ, ಆದರೆ ಸಂಧಾನಕ್ಕೆ ಬೆಲೆ ಕೊಟ್ಟ ಪುಲಿಕೇಶಿ ಹರ್ಷವರ್ಧನನ ಪರಾಕ್ರಮವನ್ನ ಉತ್ತರಕ್ಕೆ ಮಾತ್ರ ಸೀಮಿತಗೊಳಿಸಿ ಹಿಂದಕ್ಕೆ ಕಳುಹಿಸಿದ್ದ. ಇಂತಹ ಪುಲಿಕೇಶಿಯ ಸಾಮ್ರಾಜ್ಯ ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಉತ್ತರದಲ್ಲಿ ನರ್ಮದಾ ನದಿ ಹಾಗು ದಕ್ಷಿಣದಲ್ಲಿ ಕಾವೇರಿ ನದಿಯನ್ನು ತನ್ನ ಸೀಮಾ ರೇಖೆಯನ್ನಾಗಿ ಹೊಂದಿತ್ತು. ಇದು ಇಂದಿನ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳ ಪೂರ್ಣ ಭಾಗ ಹಾಗು ತಮಿಳುನಾಡು, ಕೇರಳ,ಛತ್ತೀಸ್ ಘಡ, ಒಡಿಶಾಗಳ ಭಾಗಶಃ ಪ್ರದೇಶಗಳ ಒಂದು ಸಾಮ್ರಾಜ್ಯವಾಗಿತ್ತು. ಇವು ಕನ್ನಡದ ರಣ ವಿಕ್ರಮ, ದಕ್ಷಿಣಾ ಪಥೇಶ್ವರ, ಪರಮೇಶ್ವರ, ಸತ್ಯಾಶ್ರಯ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಯಶೋಗಾಥೆ.